ರೈಲ್ವೇ ಫ್ಲ್ಯಾಟ್‌ ಫಾರಂನಲ್ಲಿ ಮೊಬೈಲ್‌ ಬಳಕೆ ಮಾಡಿದ್ದರಿಂದ ಕರೆಂಟ್‌ ಶಾಕ್‌ ಹೊಡೆದು ಸಾವು; ವೈರಲ್ ವೀಡಿಯೋ ಸತ್ಯವೇ?

ರೈಲ್ವೇ ಫ್ಲ್ಯಾಟ್‌ ಫಾರಂನಲ್ಲಿ ಮೊಬೈಲ್‌ ಬಳಕೆ ಮಾಡಿದ್ದರಿಂದ ಕರೆಂಟ್‌ ಶಾಕ್‌

ರೈಲ್ವೇ ಫ್ಲ್ಯಾಟ್‌ ಫಾರಂನಲ್ಲಿ ವ್ಯಕ್ತಿಯೊಬ್ಬರು ಮೊಬೈಲ್‌ ಬಳಕೆ ಮಾಡಿದ್ದರಿಂದ ಕರೆಂಟ್ ಶಾಕ್‌ ಹೊಡೆದು ಸತ್ತರು ಎಂದು ವೈರಲ್‌ ವೀಡಿಯೋವೊಂದು ವಾಟ್ಸಾಪ್‌ನಲ್ಲಿ ಹರಿದಾಡುತ್ತಿದೆ.

ಈ ಕ್ಲೇಮ್‌ನಲ್ಲಿ, “ಮೊಬೈಲ್ ಫೋನ್‌ನಲ್ಲಿ ಬ್ಲೂಟೂತ್ ಆಕ್ಟಿವೇಟ್ ಆಗುತ್ತಿದ್ದಂತೆ ಟ್ರ್ಯಾಕ್‌ನ ಹೈ ಟೆನ್ಷನ್ ಕೇಬಲ್‌ನಿಂದ ಕರೆಂಟ್ ಬಂದು ಇಯರ್ ಫೋನ್‌ಗಳ ಮೂಲಕ ಮೆದುಳಿಗೆ ತಲುಪಿತು ಮತ್ತು ನಂತರ ಏನಾಯಿತು? ನೀವೇ ನೋಡಿ. ಪ್ಲಾಟ್‌ಫಾರ್ಮ್‌ನಲ್ಲಿ “ರೈಲು ಟ್ರ್ಯಾಕ್‌ಗೆ ಹತ್ತಿರ” ಪ್ರಯಾಣಿಸುವಾಗ ಮತ್ತು ನಿಂತಿರುವಾಗ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಬ್ಲೂಟೂತ್ ಬಳಸುವುದನ್ನು ತಪ್ಪಿಸಿ.” ಎಂದಿದೆ.

ರೈಲ್ವೇ ಫ್ಲ್ಯಾಟ್‌ ಫಾರಂನಲ್ಲಿ ಮೊಬೈಲ್‌ ಬಳಕೆ ಮಾಡಿದ್ದರಿಂದ ಕರೆಂಟ್‌ ಶಾಕ್‌

ಇದೇ ರೀತಿ ವಿವಿಧ ಭಾಷೆಗಳಲ್ಲೂ ಈ ಪೋಸ್ಟ್‌ ಹರಿದಾಡುತ್ತಿರುವುದು ಕಂಡುಬಂದಿದೆ. ಆದ್ದರಿಂದ ಫ್ಲ್ಯಾಟ್‌ಫಾರಂನಲ್ಲಿ ಮೊಬೈಲ್‌ ಬ್ಲೂಟೂತ್‌ ಬಳಸಿದ್ದರಿಂದಲೇ ಈ ಘಟನೆ ನಡೆಯಿತೇ? ಇದರ ಹಿಂದಿನ ಸತ್ಯ ಏನು ಎಂಬುದನ್ನು ನೋಡೋಣ.

Fact Check

ವಾಟ್ಸಾಪ್‌ನಲ್ಲಿ ಪತ್ತೆಯಾದ ಈ ವೀಡಿಯೋದ ಕೀಫ್ರೇಂಗಳನ್ನು ತೆಗೆದು ಗೂಗಲ್‌ ರಿವರ್ಸ್ ಇಮೇಜ್‌ ಸರ್ಚ್‌ ನಡೆಸಲಾಗಿದೆ.

ಈ ವೇಳೆ ಟ್ವಿಟರ್ನಲ್ಲಿ ರೈಲ್ವೇ ಅಧಿಕಾರಿ ಅನಂತ್ ರುಪನಗುಡಿ ಎಂಬವರು ಟ್ವೀಟ್‌ ಮಾಡಿರುವುದು ಪತ್ತೆಯಾಗಿದೆ. ಅವರು ಡಿಸೆಂಬರ್‌ 8, 2022ರಂದು ಈ ಘಟನೆ ಬಗ್ಗೆ ಟ್ವೀಟ್‌ ಮಾಡಿದ್ದರು.

ಟ್ವೀಟ್‌ನಲ್ಲಿ ಅವರು “ಒಂದು ವಿಲಕ್ಷಣ ಅಪಘಾತ- ಒಂದು ಹಕ್ಕಿ ಕೇಬಲ್‌ ತುಂಡನ್ನು ತೆಗೆದುಕೊಂಡು ಹಾರಿದ್ದು ಅದು OHE ವೈರ್‌ ನೊಂದಿಗೆ ಸಂಪರ್ಕಕ್ಕೆ ಬಂದಿದ್ದು, ಅದರ ಇನ್ನೊಂದು ತುದಿ, ಫ್ಲ್ಯಾಟ್ ಫಾರಂನಲ್ಲಿದ್ದ ಟಿಟಿಇಯವರ ತಲೆಗೆ ತಾಗಿತು. ಅವರು ಸುಟ್ಟ ಗಾಯಗಳಿಗೆ ಈಡಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಈ ಘಟನೆ ನಿನ್ನೆ ಮಧ್ಯಾಹ್ನ ಖರಗ್‌ಪುರ ನಿಲ್ದಾಣದಲ್ಲಿ ಸಂಭವಿಸಿದೆ” ಎಂದು ಬರೆದುಕೊಂಡಿದ್ದಾರೆ.

ಈ ಘಟನೆಯನ್ನು ವಿವಿಧ ಮಾಧ್ಯಮಗಳೂ ವರದಿ ಮಾಡಿವೆ.

ಇಂಡಿಯಾ ಟುಡೇ ವರದಿಯಲ್ಲಿ, “ಹೈವೋಲ್ಟೇಜ್ ವೈರ್‌ ಟಿಟಿಇ ಅವರಿಗೆ ತಾಗಿದ್ದು ಅಪಘಾತ ಸಂಭವಿಸಿದೆ. ಈ ವೇಳೆ ಅವರು ಟ್ರ್ಯಾಕ್‌ಗೆ ಬಿದ್ದಿದ್ದಾರೆ. ಟಿಟಿಇ ಅವರನ್ನು ಸುಜನ್ ಸಿಂಗ್‌ ಎಂದು ಗುರುತಿಸಲಾಗಿದ್ದು, ಅವರೀಗ ಅಪಾಯದಿಂದ ಪಾರಾಗಿದ್ದಾರೆ” ಎಂದಿದೆ. ಈ ಬಗ್ಗೆ ವರದಿಯಲ್ಲಿ ರೈಲ್ವೇ ಅಧಿಕಾರಿ ಮೊಹಮ್ಮದ್‌ ಸುಜತ್‌ ಹಶ್ಮಿ ಎಂಬವರ ಪ್ರತಿಕ್ರಿಯೆ ಕೂಡ ಇದ್ದು, “ಘಟನೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ಹಕ್ಕಿಯೊಂದು ವೈರ್‌ ತುಂಡನ್ನುತೆಗೆದುಕೊಂಡು ಹಾರಿದ್ದರಿಂದ ಅದು ಹೈವೋಲ್ಟೇಜ್‌ ವಿದ್ಯುತ್‌ ಲೈನ್‌ಗೆ ತಾಗಿದ್ದು, ಇದರ ಇನ್ನೊಂದು ತುದಿ ಟಿಟಿಇ ಅವರಿಗೆ ತಾಗಿ ಘಟನೆ ನಡೆದಿದೆ” ಎಂದು ಹೇಳಿದೆ.

ಘಟನೆ ಬಗ್ಗೆ ಮಾಧ್ಯಮ ವರದಿಗಳನ್ನು ನೀವು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

Also Read: ವಿಶ್ವಕಪ್‌ ನಿರ್ಗಮನದ ನಂತರ ಬ್ರೆಜಿಲ್ ಫುಟ್ಬಾಲ್‌ ತಂಡದ ಮೇಲೆ ಅಭಿಮಾನಿಗಳು ಕಲ್ಲು-ಮೊಟ್ಟೆ ಎಸೆದರೇ? ಇಲ್ಲ ಅದು ಹಳೆ ವೀಡಿಯೋ

ಈ ಘಟನೆಯ ಕುರಿತಂತೆ ಮತ್ತು ಟಿಟಿಇ ಸುಜನ್‌ ಸಿಂಗ್‌ ಅವರ ಕುರಿತಾಗಿ ನ್ಯೂಸ್‌ ಚೆಕರ್‌ ಹಿಂದಿ ತಂಡ, ಡಿಆರ್‌ಎಮ್‌ ಖರಗ್‌ಪುರ ಕಚೇರಿ ಮತ್ತು ಖರಗ್‌ಪುರ ರೈಲ್ವೇ ವಿಭಾಗದ ಪಿಆರ್‌ಒ ರಾಜೇಶ್‌ ಕುಮಾರ್‌ ಅವರನ್ನು ಸಂಪರ್ಕಿಸಿದೆ. ಅವರು ಘಟನೆಯ ವಿವರಗಳನ್ನು ಮತ್ತು ಸುಜನ್‌ ಸಿಂಗ್‌ ಅವರು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿರುವುದಾಗಿ ಸ್ಪಷ್ಟಪಡಿಸಿದ್ದಾರೆ.

ಆದ್ದರಿಂದ ಸಾಕ್ಷ್ಯಗಳ ಪ್ರಕಾರ, ವೈರಲ್‌ ವೀಡಿಯೋದಲ್ಲಿದ್ದಂತೆ ವ್ಯಕ್ತಿಗೆ ವಿದ್ಯುತ್‌ ಶಾಕ್‌ ಆಗಿದ್ದು ನಿಜ. ಆದರೆ ಅದು ಫೋನ್‌ ಬ್ಲೂಟೂತ್‌ ಬಳಸಿದ್ದರಿಂದಾಗಿ ಆದದ್ದಲ್ಲ. ಇದು ತುಂಡಾದ ವೈರ್‌ ಒಂದರಿಂದ ಘಟನೆ ಸಂಭವಿಸಿದೆ ಎಂದು ಹೇಳಲಾಗಿದೆ. ಇನ್ನು ಆ ವ್ಯಕ್ತಿ ಸತ್ತಿಲ್ಲ. ಅವರು ಜೀವಂತ ಇದ್ದು, ಚೇತರಿಸಿಕೊಂಡಿದ್ದಾರೆ.

Conclusion

ಕ್ಲೇಮಿನಲ್ಲಿ ಹೇಳಿರುವಂತೆ “ಮೊಬೈಲ್ ಫೋನ್‌ನಲ್ಲಿ ಬ್ಲೂಟೂತ್ ಆಕ್ಟಿವೇಟ್ ಆಗುತ್ತಿದ್ದಂತೆ ಟ್ರ್ಯಾಕ್‌ನ ಹೈ ಟೆನ್ಷನ್ ಕೇಬಲ್‌ನಿಂದ ಕರೆಂಟ್ ಬಂದು ಇಯರ್ ಫೋನ್‌ಗಳ ಮೂಲಕ ಮೆದುಳಿಗೆ ತಲುಪಿತು ಮತ್ತು ನಂತರ ಏನಾಯಿತು? ನೀವೇ ನೋಡಿ. ಪ್ಲಾಟ್‌ಫಾರ್ಮ್‌ನಲ್ಲಿ “ರೈಲು ಟ್ರ್ಯಾಕ್‌ಗೆ ಹತ್ತಿರ” ಪ್ರಯಾಣಿಸುವಾಗ ಮತ್ತು ನಿಂತಿರುವಾಗ ರೈಲ್ವೆ ಪ್ಲಾಟ್‌ಫಾರ್ಮ್‌ನಲ್ಲಿ ಬ್ಲೂಟೂತ್ ಬಳಸುವುದನ್ನು ತಪ್ಪಿಸಿ” ಎಂದು ಹೇಳಿರುವುದು ಸಂಪೂರ್ಣ ತಪ್ಪಾಗಿದ್ದು, ಈ ಘಟನೆಗೆ ಕಾರಣ ಬೇರೆ ಆಗಿರುತ್ತದೆ.

Result: Partly False

Our Sources
Tweet from @Ananth_IRAS, Dated December 08, 2022
Article by India today, Dated December 08, 2022
Conversation with DRM Kharagpur Office
Contact with Khargapur Railway Division PRO Rajesh Kumar

ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.