Fact Check
Fact Check: ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿಗಳ ಮೇಲೆ ಲಾಠಿ ಚಾರ್ಜ್ ವೀಡಿಯೋ ಈಗಿನದ್ದಲ್ಲ!
Claim
ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿಗಳ ಮೇಲೆ ಲಾಠಿ ಚಾರ್ಜ್
Fact
ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿಗಳ ಮೇಲೆ ಲಾಠಿ ಚಾರ್ಜ್ ವೀಡಿಯೋ ಈಗಿನದ್ದಲ್ಲ, ಲಾಠಿ ಪ್ರಹಾರ ಆದ ಘಟನೆ 2015ರದ್ದಾಗಿದ್ದು, ಈಗ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ
ಜಗದ್ಗುರು ಶಂಕರಾಚಾರ್ಯ ಶ್ರೀ ಅವಿಮುಕ್ತೇಶ್ವರಾನಂದ ಸರಸ್ವತಿ ಶ್ರೀಗಳ ಮೇಲೆ ಲಾಠಿ ಚಾರ್ಜ್ ಮಾಡಿದ ವೀಡಿಯೋ ಒಂದನ್ನು ಇತ್ತೀಚಿನದು ಎಂಬಂತೆ ಹಂಚಿಕೊಳ್ಳಲಾಗುತ್ತಿದೆ.
ಎಕ್ಸ್ ನಲ್ಲಿ ಕಂಡುಬಂದ ಹೇಳಿಕೆಯಲ್ಲಿ, “ಯೋಗಿ ಜೀ ಅವರ ಸರ್ವಾಧಿಕಾರದಿಂದಾಗಿ ಹಿಂದೂ ಧಾರ್ಮಿಕ ನಾಯಕ ಶಂಕರಾಚಾರ್ಯ ಅವಿಮುಕ್ತೇಶ್ವರಾನಂದ ಸರಸ್ವತಿ ಅವರನ್ನು ಕುಂಭಮೇಳದಿಂದ ಹೊರಹಾಕಿ ಪೊಲೀಸ್ ಆಡಳಿತವು ಕೋಲುಗಳಿಂದ ಹೊಡೆದಿರುವುದು ತುಂಬಾ ದುಃಖಕರವಾಗಿದೆ.” ಎಂದಿದೆ.

ಅದೇ ರೀತಿ ಇನ್ನೊಂದು ಹೇಳಿಕೆಯಲ್ಲಿ “ಸನಾತನ ಧರ್ಮದಲ್ಲಿ ಶ್ರೇಷ್ಠರೆಂದು ಪರಿಗಣಿಸಲ್ಪಟ್ಟ ಆದಿಗುರು ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಮಹಾರಾಜ್ ಜಿ ಅವರ ಮೇಲೆ ಲಾಠಿ ಚಾರ್ಜ್ ಮಾಡುವಾಗ, ಪೊಲೀಸರು ಯಾರ ಮೇಲೆ ಲಾಠಿ ಚಾರ್ಜ್ ಮಾಡುತ್ತಿದ್ದಾರೆಂದು ಯೋಚಿಸುವುದೇ ಇಲ್ಲ. ಇದು ಯೋಗಿ ಜಿ ಅವರ ಶಾಶ್ವತ ಪ್ರೀತಿ. ಈ ರೀತಿಯಾಗಿ ಮಾತ್ರ ಮೋದಿ jI ಭಾರತವನ್ನು ವಿಶ್ವ ನಾಯಕನನ್ನಾಗಿ ಮಾಡುತ್ತಾರೆ.” ಮತ್ತು ಕಾಶಿ ಬಾಬಾ ಮೇಲೆ ಲಾಠಿ, ಸನಾತನ ಧರ್ಮದ ಮೇಲೆ ಲಾಠಿ ಎಂಬ ಹೇಳಿಕೆಗಳೊಂದಿಗೆ ಇದನ್ನು ಹಂಚಿಕೊಳ್ಳಲಾಗಿದೆ.
ಇದೇ ವೀಡಿಯೋ ಕನ್ನಡದಲ್ಲೂ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ. ಇವುಗಳನ್ನು ಇಲ್ಲಿ ನೋಡಬಹುದು.



ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ಮಾಡಿದ್ದು, ಇದು ಹಳೆ ವೀಡಿಯೋ ಆಗಿದೆ ಎಂದು ಕಂಡುಕೊಂಡಿದೆ.
Also Read: ಯೋಗಿ ಸರ್ಕಾರ ಮಸೀದಿ ತೆರವುಗೊಳಿಸಿ, ಅಲ್ಲಿ ಶಾಲೆ ನಿರ್ಮಾಣಕ್ಕೆ ಉದ್ದೇಶಿಸಿದೆ ಎನ್ನುವ ಹೇಳಿಕೆ ನಿಜವೇ?
Fact Check/Verification
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ಮಾಡಿದ್ದೇವೆ. ಈ ವೇಳೆ ಲಭ್ಯವಾದ ಫಲಿತಾಂಶಗಳು, ವೈರಲ್ ಆಗಿರುವ ವೀಡಿಯೋಗಳು ಹಳೆಯದು ಎಂದು ಗೊತ್ತಾಗಿದೆ.
ಏಪ್ರಿಲ್ 13, 2021ರ ಡೈಲಿ ಪಯೊನೀರ್ ವರದಿಯ ಪ್ರಕಾರ, “ಮೃದು ಹಿಂದುತ್ವದ ನಿಲುವನ್ನು ಅಳವಡಿಸಿಕೊಂಡ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, 2015 ರಲ್ಲಿ ವಾರಣಾಸಿಯಲ್ಲಿ ನಡೆದ ಲಾಠಿ ಚಾರ್ಜ್ಗೆ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಮತ್ತು ಅವರ ಶಿಷ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರಲ್ಲಿ ಕ್ಷಮೆಯಾಚಿಸಿದರು. ಆಗ ಅಖಿಲೇಶ್ ಯಾದವ್ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಅವರು ಭಾನುವಾರ ಹರಿದ್ವಾರದಲ್ಲಿ ಧಾರ್ಮಿಕ ಮುಖಂಡರನ್ನು ಭೇಟಿಯಾಗಿ ಅವರ ಆಶೀರ್ವಾದ ಪಡೆದರು. “ನಾನು ನನ್ನ ತಪ್ಪನ್ನು ಒಪ್ಪಿಕೊಂಡಿದ್ದೇನೆ ಮತ್ತು ವಾರಣಾಸಿಯಲ್ಲಿ ಲಾಠಿ ಚಾರ್ಜ್ ಮಾಡಿದ್ದಕ್ಕಾಗಿ ಶಂಕರಾಚಾರ್ಯರು ಮತ್ತು ಅವರ ಶಿಷ್ಯರಲ್ಲಿ ಕ್ಷಮೆಯಾಚಿಸಿದ್ದೇನೆ” ಎಂದು ಅಖಿಲೇಶ್ ಯಾದವ್ ಭಾನುವಾರ ಹರಿದ್ವಾರದಲ್ಲಿ ಶ್ರೀಗಳನ್ನು ಭೇಟಿಯಾದ ನಂತರ ಹೇಳಿದರು” ಎಂದಿದೆ. ಇದೇ ವರದಿಯಲ್ಲಿ “2015 ರಲ್ಲಿ, ವಾರಣಾಸಿಯಲ್ಲಿ ಪೊಲೀಸರು ಗಂಗಾ ನದಿಯಲ್ಲಿ ಗಣೇಶನ ವಿಗ್ರಹಗಳನ್ನು ವಿಸರ್ಜಿಸಬೇಕೆಂದು ಒತ್ತಾಯಿಸಿ ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಮಾಡಿದ್ದರು. ಲಾಠಿ ಚಾರ್ಜ್ನಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಮತ್ತು ಇತರ ಹಲವಾರು ಧಾರ್ಮಿಕ ಮುಖಂಡರು ಗಾಯಗೊಂಡರು. ಸ್ವಾಮಿ ಅವಿಮುಕ್ತೇಶ್ವರಾನಂದ ಅವರನ್ನು ಸಹ ಬಂಧಿಸಿ ಜೈಲಿಗೆ ಕಳುಹಿಸಲಾಯಿತು.” ಎಂದಿದೆ.

ಏಪ್ರಿಲ್ 12, 2021 ರ ಜಾಗರಣ್ ವರದಿಯ ಪ್ರಕಾರ, “ಆರು ವರ್ಷಗಳ ಹಿಂದೆ ವಾರಣಾಸಿಯಲ್ಲಿ ನಡೆದ ಲಾಠಿ ಚಾರ್ಜ್ಗೆ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಮತ್ತು ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಭಾನುವಾರ ಹರಿದ್ವಾರದಲ್ಲಿರುವ ಸಂತರಲ್ಲಿ ಕ್ಷಮೆಯಾಚಿಸಿದ್ದಾರೆ. ‘ತಪ್ಪನ್ನು ಒಪ್ಪಿಕೊಂಡು, ನಾನು ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಮತ್ತು ಅವರ ಶಿಷ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಅವರಲ್ಲಿ ಕ್ಷಮೆಯಾಚಿಸಿದ್ದೇನೆ.’ ಎಂದು ಅಖಿಲೇಶ್ ಹೇಳಿದ್ದಾರೆ. ಭಾನುವಾರ, ಅಖಿಲೇಶ್ ಯಾದವ್ ಹರಿದ್ವಾರ ತಲುಪಿ ಕಂಖಾಲ್ನಲ್ಲಿರುವ ಶಂಕರಾಚಾರ್ಯ ಮಠದಲ್ಲಿ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಮತ್ತು ಸ್ವಾಮಿ ಅವಿಮುಕ್ತೇಶ್ವರಾನಂದ ಅವರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು. ಇದಾದ ನಂತರ, ಮಾಧ್ಯಮಗಳೊಂದಿಗಿನ ಸಂಕ್ಷಿಪ್ತ ಸಂವಾದದಲ್ಲಿ, ಇತ್ತೀಚೆಗೆ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಮಥುರಾದಲ್ಲಿ ದೇಶದ ರೈತರು ಎಷ್ಟು ತೊಂದರೆಯಲ್ಲಿದ್ದಾರೆ ಎಂಬುದರ ಕುರಿತು ಹೇಳಿಕೆ ನೀಡಿದ್ದರು. ಇದರಿಂದ ಪ್ರಭಾವಿತನಾಗಿ, ಶಂಕರಾಚಾರ್ಯರ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದಾಗಿ ತಿಳಿಸಿದರು. ವಾಸ್ತವವಾಗಿ, ಇದು 2015 ರ ವಾರಣಾಸಿ ಜಿಲ್ಲೆಯ ವಿಷಯ, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಸರ್ಕಾರದ ಆಳ್ವಿಕೆಯಲ್ಲಿ, ಆಡಳಿತ ಸಂತರು ಗಂಗಾ ನದಿಯಲ್ಲಿ ಗಣೇಶ ಮೂರ್ತಿಯನ್ನು ಮುಳುಗಿಸಲು ಅನುಮತಿಸಲಿಲ್ಲ. ಇದರಿಂದ ಕೋಪಗೊಂಡ ಸಂತರು ಮತ್ತು ಸನ್ಯಾಸಿಗಳು ಶ್ರೀವಿದ್ಯಾ ಮಠದ ಮುಖ್ಯಸ್ಥ ಸ್ವಾಮಿ ಅವಿಮುಕ್ತೇಶ್ವರಾನಂದರೊಂದಿಗೆ ಗಂಗಾ ನದಿಯ ದಡದಲ್ಲಿ ಧರಣಿ ಕುಳಿತರು. ಸಂತರನ್ನು ಕಳಿಸಲು ಪೊಲೀಸರು ಅವರ ಮೇಲೆ ಲಾಠಿ ಚಾರ್ಜ್ ಮಾಡಿದರು. ಇದರಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಸೇರಿದಂತೆ ಅನೇಕ ಸಂತರು ಗಾಯಗೊಂಡರು.” ಎಂದಿದೆ.

ಈ ಸುದ್ದಿಗಳ ಪ್ರಕಾರ ನಾವು ಸ್ವಾಮಿ ಅವಿಮುಕ್ತೇಶ್ವರಾನಂದ ಶ್ರೀಗಳ ಮೇಲೆ ಲಾಠಿ ಚಾರ್ಜ್ ಆಗಿರುವ ಕುರಿತು ಮತ್ತಷ್ಟು ಶೋಧ ನಡೆಸಿದ್ದೇವೆ.
ಸೆಪ್ಟೆಂಬರ್ 19, 2015ರ ಆಜ್ ತಕ್ ಯೂಟ್ಯೂಬ್ ವೀಡಿಯೋದಲ್ಲಿ, “India 360: Locals Lathi-Charged In Varanasi Over Idol Immersion” ಎಂದಿದೆ. ಇದರ ವಿವರಣೆಯಲ್ಲಿ, ಗಂಗಾನದಿಯಲ್ಲಿ ಗಣೇಶ ವಿಗ್ರಹ ವಿಸರ್ಜನೆಗೆ ಆಗ್ರಹಿಸಿ ಧರಣಿ ಸತ್ಯಾಗ್ರಹ ನಡೆಸಿದ ಸ್ಥಳೀಯರ ಮೇಲೆ ಲಾಠಿ ಚಾರ್ಜ್ ಆಗಿದೆ ಎಂದಿದೆ. ಈ ವೀಡಿಯೋದಲ್ಲಿ ಸ್ವಾಮಿ ಅವಿಮುಕ್ತೇಶ್ವರಾನಂದ ಅವರ ಮೇಲೆ ಲಾಠಿ ಚಾರ್ಜ್ ಮಾಡುವುದನ್ನು ಕಾಣಬಹುದು. ನಮ್ಮ ಶೋಧನೆಯ ಪ್ರಕಾರ, ಈ ವೀಡಿಯೋ ವೈರಲ್ ವೀಡಿಯೋವನ್ನು ಬಹುತೇಕ ಹೋಲಿಕೆಯಾಗುತ್ತದೆ ಎಂಬುದನ್ನು ಕಂಡುಕೊಂಡಿದ್ದೇವೆ.
ಸೆಪ್ಟೆಂಬರ್ 23, 2015ರ ನ್ಯೂಸ್ 24 ಯೂಟ್ಯೂಬ್ ವೀಡಿಯೋದಲ್ಲಿ “Varanasi Police lathicharge devotees trying to immerse Ganesha idol” ಎಂದಿದೆ. ಇದರ ವಿವರಣೆಯಲ್ಲಿ, ವಾರಾಣಾಸಿಯಲ್ಲಿ ಗಣೇಶ ಮೂರ್ತಿಯನ್ನು ಗಂಗೆಯಲ್ಲಿ ವಿಸರ್ಜಿಸಲು ಯತ್ನಿಸಿದ ಸ್ಥಳೀಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡಿದರು ಎಂದಿದೆ. ಈ ವೀಡಿಯೋದಲ್ಲೂ ಅವಿಮುಕ್ತೇಶ್ವರಾನಂದ ಅವರು ಮತ್ತು, ಬೆಂಬಲಿಗರ ಮೇಲೆ ಲಾಠಿ ಚಾರ್ಜ್ ಆಗುವುದನ್ನು ಕಾಣಬಹುದು.

ವರದಿಗಳ ಪ್ರಕಾರ, ವಾರಾಣಾಸಿಯಲ್ಲಿ ಗಂಗಾ ನದಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆಗೆ ತಡೆಯಿದ್ದು, ಸ್ಥಳೀಯರು ಇದನ್ನು ವಿರೋಧಿಸಿ ಮೂರ್ತಿ ವಿಸರ್ಜನೆಗೆ ಯತ್ನಿಸಿದಾಗ ಪೊಲೀಸರು ಲಾಠಿ ಚಾರ್ಜ್ ಮಾಡಿದ್ದರು. ಸ್ಥಳೀಯರ ಪ್ರತಿಭಟನೆ ವೇಳೆ ಸ್ವಾಮೀಜಿ ಅವಿಮುಕ್ತೇಶ್ವರಾನಂದ ಅವರೂ ಇದ್ದರು ಎಂದು ಗೊತ್ತಾಗಿದೆ.
ಇದೇ ರೀತಿಯ ವರದಿಗಳನ್ನು ಇಲ್ಲಿ ಇಲ್ಲಿ ನೋಡಬಹುದು.
Conclusion
ಈ ಶೋಧನೆಯ ಪ್ರಕಾರ, ಜಗದ್ಗುರು ಶಂಕರಾಚಾರ್ಯ ಶ್ರೀ ಅವಿಮುಕ್ತೇಶ್ವರಾನಂದ ಅವರ ಮೇಲೆ ಲಾಠಿ ಪ್ರಹಾರ ಆದ ಘಟನೆ ಈಗಿನದ್ದಲ್ಲ ಅದು 2015ರದ್ದಾಗಿದ್ದು, ಈಗ ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.
Also Read: ಜವಾಹರಲಾಲ್ ನೆಹರೂ ಕುಂಭಮೇಳದಲ್ಲಿ ಸ್ನಾನ ಮಾಡಿದ್ದರೇ?
Result: False
Our Results
Report By Dailypioneer, Dated: April 13, 2021
Report By Jagran, Dated: April 12, 2021
YouTube Video By AajTak, Dated: September 19, 2015
YouTube Video By News 24, Dated: September 23, 2015
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.