Fact Check: ಮೀರಾ ರೋಡ್‌ನಲ್ಲಿ ಗಲಭೆಗೈದ ಮುಸ್ಲಿಮರಿಗೆ ಪೊಲೀಸರ ಹೊಡೆತ ಎಂದ ಈ ವೀಡಿಯೋ ಹಿಂದಿನ ಸತ್ಯ ಏನು?

ಮೀರಾ ರೋಡ್‌, ಸಹ್ರಾನ್ ಪುರ, ಉತ್ತರಪ್ರದೇಶ,

Claim
ಮೀರಾ ರೋಡ್‌ನಲ್ಲಿ ಗಲಭೆಗೈದ ಮುಸ್ಲಿಮರಿಗೆ ಪೊಲೀಸರ ಹೊಡೆತ

Fact
ವೈರಲ್‌ ವೀಡಿಯೋ, ಮುಂಬೈ ಮೀರಾರೋಡ್‌ ಘಟನೆಗೆ ಸಂಬಂಧಿಸಿದ್ದಲ್ಲ. 2022ರಲ್ಲಿ ನೂಪುರ್ ಶರ್ಮಾ ವಿರುದ್ಧ ಉತ್ತರಪ್ರದೇಶದ ಸಹ್ರಾನ್‌ ಪುರದಲ್ಲಿ ಪ್ರತಿಭಟನೆ ನಡೆಸಿದ್ದ ಮುಸ್ಲಿಂ ಯುವಕರಿಗೆ ಪೊಲೀಸ್‌ ಕಸ್ಟಡಿಯಲ್ಲಿ ಹೊಡೆದಿದ್ದ ವೈರಲ್ ವೀಡಿಯೋ ಇದಾಗಿದೆ

ಮುಂಬೈ ಮೀರಾ ರೋಡ್ ಬ್ಯಾರಿ ಬಾಂಧವರಿಗೆ ಪೊಲೀಸರಿಂದ ಹೃದಯ ಸ್ಪರ್ಶಿ ಸತ್ಕಾರ ಎಂದು ವೀಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.

ಕಂಬಿ ಹಿಂದೆ ಕುಳಿತ ಜನರು ಮತ್ತು ಪೊಲೀಸ್‌ ಒಬ್ಬರು ಲಾಠಿಯಿಂದ ಯುವಕರಿಗೆ ಹೊಡೆಯುತ್ತಿರುವ ದೃಶ್ಯವನ್ನು ಇಲ್ಲಿ ಕಾಣಬಹುದು. ವಾಟ್ಸಾಪ್ ನಲ್ಲಿ ಈ ವೀಡಿಯೋ ಹರಿದಾಡುತ್ತಿದ್ದು ಇದನ್ನು ಸತ್ಯಶೋಧನೆ ಮಾಡಲು ನ್ಯೂಸ್‌ಚೆಕರ್‌ ಮುಂದಾಗಿದೆ.

Also Read: ರಾಮ ಮಂದಿರ ಪ್ರಾಣ ಪ್ರತಿಷ್ಠೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮುಗೆ ಆಹ್ವಾನ ಕೊಟ್ಟಿಲ್ಲ ಎನ್ನುವುದು ಸತ್ಯವೇ?

Fact Check: ಮೀರಾ ರೋಡ್‌ನಲ್ಲಿ ಗಲಭೆಗೈದ ಮುಸ್ಲಿಮರಿಗೆ ಪೊಲೀಸರ ಹೊಡೆತ ಎಂದ ಈ ವೀಡಿಯೋ ಹಿಂದಿನ ಸತ್ಯ ಏನು?
ವಾಟ್ಸಾಪ್‌ ನಲ್ಲಿ ಕಂಡುಬಂದ ಕ್ಳೇಮ್

ಸತ್ಯಶೋಧನೆಯ ಪ್ರಕಾರ, ಇದು ಮೀರಾ ರೋಡ್‌ನಲ್ಲಿ ಸಂಭವಿಸಿದ ಕೋಮು ಘರ್ಷಣೆಗೆ ಸಂಬಂಧಿಸಿದ್ದಲ್ಲ ಮತ್ತು ಈ ವೀಡಿಯೋ ಉತ್ತರ ಪ್ರದೇಶದದ್ದು ಎಂದು ತಿಳಿದುಬಂದಿದೆ.

Fact Check/ Verification

ಸತ್ಯಶೋಧನೆಗಾಗಿ ನಾವು ವೀಡಿಯೋದ ಕೀಫ್ರೇಂಗಳನ್ನು ತೆಗೆದು ರಿವರ್ಸ್ ಇಮೇಜ್‌ ಸರ್ಚ್ ನಡೆಸಿದ್ದೇವೆ. ಈ ವೇಳೆ ಫಲಿತಾಂಶಗಳು ಲಭ್ಯವಾಗಿವೆ.

17 ಜೂನ್‌ 2022ರ ಬಿಬಿಸಿ ನ್ಯೂಸ್, “ನೂಪುರ್ ಶರ್ಮಾ ವಿರುದ್ಧದ ಪ್ರತಿಭಟನೆ, ಭಾರತವನ್ನು ಬೆಚ್ಚಿ ಬೀಳಿಸಿದ ಪೊಲೀಸ್‌ ಹಿಂಸೆ” ಶೀರ್ಷಿಕೆಯಡಿ ನೀಡಿದ ವರದಿಯಲ್ಲಿ ಮುಸ್ಲಿಂ ಯುವಕರನ್ನು ಪೊಲೀಸರು ಕಸ್ಟಡಿಯಲ್ಲಿ ಹೊಡೆಯುತ್ತಿರುವ ದೃಶ್ಯ ವ್ಯಾಪಕವಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ ಎಂದಿದೆ. ಪ್ರವಾದಿ ಮಹಮ್ಮದ್‌ ವಿರುದ್ಧ ಬಿಜೆಪಿ ವಕ್ತಾರರಾದ ನೂಪುರ್ ಶರ್ಮಾ ಅವರು ನೀಡಿದ ಹೇಳಿಕೆ ಬಗ್ಗೆ ದೇಶಾದ್ಯಂತ ಪ್ರತಿಭಟನೆ ಆಯೋಜನೆಯಾಗಿದ್ದು ಶುಕ್ರವಾರ ಮಸೀದಿ ಪ್ರಾರ್ಥನೆ ಬಳಿಕ ಉತ್ತರಪ್ರದೇಶದ ಸಹ್ರಾನ್ ಪುರದಲ್ಲೂ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿದ್ದು, ಕೆಲವರಡೆ ಬಿಗು ವಾತಾವರಣ ಕಂಡುಬಂದಂತೆ ವಾರವೊಂದರಲ್ಲಿ ಹಲವರನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದು, ಅವರಿಗೆ ಪೊಲೀಸರು ಹೊಡೆಯುವ ದೃಶ್ಯ ಹರಿದಾಡಿದೆ ಎಂದಿದೆ.

Fact Check: ಮೀರಾ ರೋಡ್‌ನಲ್ಲಿ ಗಲಭೆಗೈದ ಮುಸ್ಲಿಮರಿಗೆ ಪೊಲೀಸರ ಹೊಡೆತ ಎಂದ ಈ ವೀಡಿಯೋ ಹಿಂದಿನ ಸತ್ಯ ಏನು?
ಬಿಬಿಸಿ ನ್ಯೂಸ್‌ ವರದಿ

ಜೂನ್‌ 12, 2022ರ ಟೈಮ್ಸ್ ನೌ ವರದಿಯ ಪ್ರಕಾರ, “ಪ್ರತಿಭಟನಕಾರರನ್ನು ಪೊಲೀಸರು ಥಳಿಸುತ್ತಿರುವ ದೃಶ್ಯ ವಿವಾದ ಹುಟ್ಟು ಹಾಕಿದ್ದು, ಬಿಜೆಪಿ ಇದನ್ನು ಗಲಭೆಕೋರರಿಗೆ “ರಿಟರ್ನ್ ಗಿಫ್ಟ್” ಎಂದು ಬಣ್ಣಿಸಿದೆ ಎಂದಿದೆ. ಉತ್ತರ ಪ್ರದೇಶದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವಾಗಲೇ ಪ್ರತಿಭಟನಕಾರರನ್ನು ಥಳಿಸಿರುವುದು ವಿವಾದ ಹುಟ್ಟುಹಾಕಿದೆ. ಈ ವಿಡಿಯೋವನ್ನು ಸಹ್ರಾನ್‌ ಪುರದಲ್ಲಿ ತೆಗೆಯಲಾಗಿದೆ ಎಂದು ಹೇಳಲಾಗಿದೆ. ನೂಪುರ್ ಶರ್ಮಾ ಅವರು ಪ್ರವಾದಿ ಮಹಮ್ಮದ್‌ ಬಗ್ಗೆ ನೀಡಿದ ಹೇಳಿಕೆ ಬಗ್ಗೆ ಪ್ರತಿಭಟನೆ ನಡೆಸಿದ ಪ್ರಕರಣದಲ್ಲಿ ಯುವಕರನ್ನು ವಶಕ್ಕೆ ಪಡೆಯಲಾಗಿದ್ದು ಅವರಿಗೆ ಠಾಣೆಯಲ್ಲಿ ಹೊಡೆಯಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹೇಳಲಾಗಿದೆ. ಈ ಘಟನೆ ಠಾಣೆಯಲ್ಲಿ ನಡೆದಿದೆಯೇ, ಹೊರಗಡೆ ನಡೆದಿದೆಯೇ ಎಂಬುದು ಖಚಿತವಾಗಿಲ್ಲ. ಈ ಬಗ್ಗೆ ಈ ಹಿಂದೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಮಾಧ್ಯಮ ಸಲಹೆಗಾರರಾಗಿದ್ದ ಬಿಜೆಪಿ ಶಾಸಕ ಶಲಭ್ ಮಣಿ ತ್ರಿಪಾಠಿ “ಗಲಭೆಕೋರರಿಗೆ ರಿಟರ್ನ್ ಗಿಫ್ಟ್” ಎಂಬ ಹೇಳಿಕೆಯೊಂದಿಗೆ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಶೇರ್ ಮಾಡಿದ್ದು ತೀವ್ರ ವಿವಾದ ಸೃಷ್ಟಿಸಿದೆ ಎಂದಿದೆ.

Also Read: ಭಕ್ತನೊಬ್ಬ ಕೈಗಳಲ್ಲಿ ನಡೆದುಕೊಂಡು ಅಯೋಧ್ಯೆಗೆ ಹೋಗುತ್ತಿದ್ದಾನೆ ಎನ್ನುವುದು ನಿಜವೇ?

ಜೂನ್‌ 21, 2022ರ ಇಂಡಿಯಾ ಟುಡೇ ವರದಿಯಲ್ಲಿ, ಪ್ರವಾದಿ ಕುರಿತ ಹೇಳಿಕೆ ವಿವಾದದಲ್ಲಿ ಸಹ್ರಾನ್‌ ಪುರದಲ್ಲಿ ಕಸ್ಟಡಿಯಲ್ಲೇ  ಪ್ರತಿಭಟನಕಾರರಿಗೆ ಹೊಡೆದ ಪ್ರಕರಣಕ್ಕೆ ಸಂಬಂಧಿಸಿ ಮಾನ ಹಕ್ಕುಗಳ ಆಯೋಗ, ವರದಿ ಕೇಳಿದೆ ಎಂದಿದೆ.

Fact Check: ಮೀರಾ ರೋಡ್‌ನಲ್ಲಿ ಗಲಭೆಗೈದ ಮುಸ್ಲಿಮರಿಗೆ ಪೊಲೀಸರ ಹೊಡೆತ ಎಂದ ಈ ವೀಡಿಯೋ ಹಿಂದಿನ ಸತ್ಯ ಏನು?
ಇಂಡಿಯಾ ಟುಡೇ ವರದಿ

ಇದೇ ಘಟನೆಗೆ ಸಂಬಂಧಿಸಿದಂತೆ ಮಾಧ್ಯಮಗಳ ವರದಿಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

Conclusion

ಆದ್ದರಿಂದ ಈ ಸತ್ಯಶೋಧನೆಯ ಪ್ರಕಾರ, ಮುಂಬೈ ಮೀರಾ ರೋಡ್ ನಲ್ಲಿ ನಡೆದ ಕೋಮು ಪ್ರಕರಣಕ್ಕೆ ಸಂಬಂಧಿದ ವಿದ್ಯಮಾನ ಇದಲ್ಲ, ಇದು ಉತ್ತರಪ್ರದೇಶದ ಸಹ್ರಾನ್‌ ಪುರದಲ್ಲಿ ನೂಪುರ್ ಶರ್ಮಾ ಹೇಳಿಕೆ ವಿರುದ್ಧದ ಪ್ರತಿಭಟನಕಾರರಿಗೆ ಪೊಲೀಸರು ಹೊಡೆದ ಪ್ರಕರಣವಾಗಿದ್ದು 2022ರ ಸಮಯದ್ದು ಎಂದು ತಿಳಿದುಬಂದಿದೆ.

Also Read: ಬುರ್ಜ್ ಖಲೀಫಾ ಕಟ್ಟದ ಮೇಲೆ ರಾಮನ ಚಿತ್ರ ಪ್ರದರ್ಶಿಸಲಾಗಿದೆಯೇ?

Result: False

Our Sources:
Report By BBC News, Dated: June 17, 2022

Report By Times Now, Dated: June 12, 2022

Report By India Today, Dated: June 21, 2022


ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.