Newchecker.in is an independent fact-checking initiative of NC Media Networks Pvt. Ltd. We welcome our readers to send us claims to fact check. If you believe a story or statement deserves a fact check, or an error has been made with a published fact check
Contact Us: checkthis@newschecker.in
Fact Check
Claim
ಬೆಂಗಳೂರು ಕುಡಿಯುವ ನೀರಿನ ಕುರಿತ ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಚಿಪ್ಸ್ ತಿನ್ನುತ್ತಿದ್ದರು
Fact
ವೈರಲ್ ವೀಡಿಯೋ ಬೆಂಗಳೂರಿನ ನೀರಿನ ಬಿಕ್ಕಟ್ಟಿನ ಬಗ್ಗೆ ಕರೆದ ಸಭೆಯದ್ದಲ್ಲ, ಅದು ಸುಮಾರು ಮೂರು ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಸಭೆಯ ವೀಡಿಯೋ ಆಗಿದೆ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಸಭೆಯೊಂದರ ಮಧ್ಯದಲ್ಲಿ ಏನನ್ನೋ ತಿನ್ನುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿ ಕುಡಿಯುವ ನೀರಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ಸರ್ಕಾರವು ಸಭೆ ಕರೆದಿದ್ದು, ಅದರಲ್ಲಿ ಡಿ.ಕೆ. ಶಿವಕುಮಾರ್ ಅವರು ತಿನ್ನಲು ಆರಂಭಿಸಿದರು ಎಂಬ ಹೇಳಿಕೆಯೊಂದಿಗೆ ವೀಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ.
ಬೆಂಗಳೂರು ಇತ್ತೀಚಿನ ದಿನಗಳಲ್ಲಿ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಈ ಬಿಕ್ಕಟ್ಟಿಗೆ ಕಾರಣ ಅಂತರ್ಜಲ ಮಟ್ಟ ಕುಸಿಯುತ್ತಿರುವುದು. ನೈಋತ್ಯ ಮಾನ್ಸೂನ್ ದುರ್ಬಲವಾಗಿರುವುದು, ಕೆರೆಗಳ ನಾಶ ಮತ್ತು ಅನೇಕ ಪರಿಸರ ಕಾರಣಗಳಿಂದಾಗಿ ನೀರು ಕಡಿಮೆಯಾಗಿದೆ. ಕೊಳವೆಬಾವಿಗಳು ಒಣಗಿವೆ. ಜನರು ಕುಡಿಯುವ ನೀರಿಗಾಗಿ ಸಮಸ್ಯೆ ಅನುಭವಿಸುವಂತಾಗಿದೆ.
ಆದಾಗ್ಯೂ, ವೈರಲ್ ವೀಡಿಯೋ ಬೆಂಗಳೂರಿನ ನೀರಿನ ಬಿಕ್ಕಟ್ಟಿನ ಬಗ್ಗೆ ಕರೆದ ಸಭೆಯದ್ದಲ್ಲ, ಅದು ಸುಮಾರು ಮೂರು ತಿಂಗಳ ಹಿಂದೆ ಬೆಳಗಾವಿಯಲ್ಲಿ ನಡೆದ ಸಭೆಯ ವೀಡಿಯೋ ಎಂದು ನಾವು ನಮ್ಮ ತನಿಖೆಯಲ್ಲಿ ಕಂಡುಕೊಂಡಿದ್ದೇವೆ.
Also Read: ಮುಂದಿನ ಜನ್ಮದಲ್ಲಿ ಹುಟ್ಟುವುದಾದರೆ ಮುಸ್ಲಿಂ ಆಗಿಯೇ ಹುಟ್ಟುತ್ತೇನೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆಯೇ?
ಈ ವೀಡಿಯೋವನ್ನು ವೈರಲ್ ಕ್ಲೈಮ್ ನೊಂದಿಗೆ ಹಂಚಿಕೊಳ್ಳಲಾಗಿದ್ದು, “ಬೆಂಗಳೂರಿನಲ್ಲಿ ನೀರಿನ ಭಾರಿ ಕೊರತೆಯಿದೆ, ಜನರು ನೀರಿಗಾಗಿ ಗಂಟೆಗಟ್ಟಲೆ ಅಲೆದಾಡುತ್ತಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನೀರಿನ ಕೊರತೆ ಕುರಿತು ಸಭೆ ಕರೆದಿದ್ದು, ಅವರು ಅದರಲ್ಲಿ ಎಷ್ಟು ಗಂಭೀರವಾಗಿ ಭಾಗವಹಿಸುತ್ತಿದ್ದಾರೆ ಎಂಬುದನ್ನು ನೋಡಿ.” ಎಂದಿದೆ.
ವಾಟ್ಸಾಪ್ ನಲ್ಲಿ ಕಂಡುಬಂದ ಇನ್ನೊಂದು ಕ್ಲೇಮಿನಲ್ಲಿ “ಬೆಂಗಳೂರಿನ ಕುಡಿಯುವ ನೀರಿನ ಬಿಕ್ಕಟ್ಟನ್ನು ನಿವಾರಿಸಲು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭಾಗವಹಿಸಿದರು” ಎಂದಿದೆ.
30 ಸೆಕೆಂಡುಗಳ ಈ ವೀಡಿಯೋದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಚಿಪ್ಸ್ ತರಹದ ಆಹಾರವನ್ನು ಸೇವಿಸುತ್ತಿದ್ದಾರೆ. ಈ ವಿಡಿಯೋದಲ್ಲಿ ಜೀ ನ್ಯೂಸ್ ಕನ್ನಡದ ಲೋಗೋ ಕೂಡ ಇದೆ.
ನ್ಯೂಸ್ ಚೆಕರ್ ಮೊದಲು ವೈರಲ್ ವೀಡಿಯೋದ ಕೀಫ್ರೇಮ್ ಗಳನ್ನು ತೆಗೆದು ರಿವರ್ಸ್ ಇಮೇಜ್ ಸರ್ಚ್ ಮಾಡಿದೆ. ಈ ಸಮಯದಲ್ಲಿ, ಜೀ ನ್ಯೂಸ್ ಕನ್ನಡ ಫೇಸ್ಬುಕ್ ಪುಟದಿಂದ ಡಿಸೆಂಬರ್ 12, 2023 ರಂದು ಅಪ್ಲೋಡ್ ಮಾಡಲಾದ ವೀಡಿಯೋವನ್ನು ನಾವು ಕಂಡುಕೊಂಡಿದ್ದೇವೆ. ಈ ವೀಡಿಯೋದಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ಚಿಪ್ಸ್ ತಿನ್ನುತ್ತಿದ್ದಾರೆ ಎಂದು ಬರೆಯಲಾಗಿದೆ. ಆದರೆ, ಇದನ್ನು ಹೊರತುಪಡಿಸಿ ಬೇರೆ ಯಾವುದೇ ಮಾಹಿತಿಯನ್ನು ನೀಡಿಲ್ಲ.
ಬಳಿಕ ನಾವು ಗೂಗಲ್ ಕೀವರ್ಡ್ ಸರ್ಚ್ ನಡೆಸಿದ್ದು, ವಿಜಯವಾಣಿ ಯೂಟ್ಯೂಬ್ ಖಾತೆಯಿಂದ 2023 ರ ಡಿಸೆಂಬರ್ 12 ರಂದು ಅಪ್ಲೋಡ್ ಮಾಡಲಾದ ವೀಡಿಯೋವನ್ನು ಗಮನಿಸಿದ್ದೇವೆ. ಇದರಲ್ಲಿ ದೀರ್ಘ ಅವಧಿಯ ವೀಡಿಯೋ ಇದೆ.
ಸುಮಾರು 1 ನಿಮಿಷ 57 ಸೆಕೆಂಡುಗಳ ಈ ವೀಡಿಯೋದಲ್ಲಿ ಸಚಿವ ಬಿ.ನಾಗೇಂದ್ರ ಅವರು ನೀರಿನ ವಿಚಾರದಲ್ಲಿ ಮಾತನಾಡುತ್ತಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಸಚಿವ ಜಮೀರ್ ಅಹ್ಮದ್ ಖಾನ್ ಅವರು ತಿನ್ನುತ್ತಿರುವುದು ಕಂಡುಬರುತ್ತದೆ.
ಇನ್ನು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಅಧಿಕೃತ ಫೇಸ್ಬುಕ್ ಖಾತೆಯಿಂದ 2023 ರ ಡಿಸೆಂಬರ್ 11 ರಂದು ಮಾಡಿದ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಈ ಪೋಸ್ಟ್ ನಲ್ಲಿರುವ ಚಿತ್ರಗಳು ಮೇಲೆ ಕಂಡುಬರುವ ಯೂಟ್ಯೂಬ್ ವೀಡಿಯೋ ದೃಶ್ಯಗಳಿಗೆ ಹೋಲಿಕೆಯಾಗುತ್ತವೆ. ಡಿ.ಕೆ. ಶಿವಕುಮಾರ್ ಅವರ ಪೋಸ್ಟ್ ಪ್ರಕಾರ, “ಕೊಪ್ಪಳದ ಹುಲಿಗಿ ನೀರು ಬಳಕೆದಾರರ ಸಂಘದವರು ಇಂದು ನನ್ನನ್ನು ಬೆಳಗಾವಿಯಲ್ಲಿ ಭೇಟಿಯಾಗಿ ತುಂಗಭದ್ರಾ ಜಲಾಶಯದಲ್ಲಿ ಇರುವ ನೀರನ್ನು ಕೊಪ್ಪಳ, ವಿಜಯನಗರ, ಬಳ್ಳಾರಿಯ ಕೃಷಿ ಭೂಮಿಗಳಿಗೆ ಹಾಗೂ ಕುಡಿಯುವ ನೀರಿನ ಉಪಯೋಗಕ್ಕಾಗಿ ಮಾತ್ರ ಒದಗಿಸಬೇಕು ಎಂದು ಮನವಿ ಮಾಡಿದರು.” ಎಂದಿದೆ.
ಆ ಪ್ರಕಾರ, ನೀರಿನ ವಿಚಾರದ ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಅವರು ತಿನ್ನುತ್ತಿರುವ ವೀಡಿಯೋ ಇತ್ತೀಚಿನದ್ದಲ್ಲ, ಅದು ಮೂರು ತಿಂಗಳು ಹಳೆಯದು ಎಂದು ಗೊತ್ತಾಗಿದೆ.
ಆ ನಂತರ ನಮ್ಮ ಸತ್ಯಶೋಧನೆಯನ್ನು ಬಲಪಡಿಸಲು ನಾವು ಹುಲಿಗಿ ನೀರು ಬಳಕೆದಾರರ ಸಂಘದ ಜನಾರ್ದನ್ ಅವರನ್ನು ನಾವು ಸಂಪರ್ಕಿಸಿದ್ದೇವೆ. “ಈ ಸಭೆ ಡಿಸೆಂಬರ್ 11, 2023 ರಂದು ನಡೆಯಿತು. ಈ ಸಭೆಯಲ್ಲಿ ಡಿ.ಕೆ.ಶಿವಕುಮಾರ್, ಜಮೀರ್ ಅಹ್ಮದ್ ಖಾನ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ತುಂಗಭದ್ರಾ ಜಲಾಶಯದಿಂದ ಬಲ ಭಾಗದ ಪ್ರದೇಶಗಳಿಗೆ ಹೆಚ್ಚುವರಿ 10 ದಿನ ನೀರು ಪೂರೈಸಲು ಒತ್ತಾಯಿಸಲಾಗಿತ್ತು. ನೀರು ಹಂಚಿಕೆ ನಿಯಮಗಳ ಪ್ರಕಾರ, ಅದಾಗಲೇ ನಿಗದಿತ ಪ್ರಮಾಣದ ನೀರು ಪೂರೈಕೆಯಾಗಿದ್ದು, ಹೆಚ್ಚುವರಿ ನೀರು ಬೇಕಾದರೆ, ಆಂಧ್ರದ ಪಾಲಿನ ನೀರು ಕೇಳಬೇಕೆಂಬ ಸಲಹೆ ವ್ಯಕ್ತವಾಯಿತು.” ಎಂದವರು ಹೇಳಿದ್ದಾರೆ.
ಇದಾದ ಬಳಿಕ ನಾವು ಬೇರೆ ಮಾಧ್ಯಮ ವರದಿಗಳ ಬಗ್ಗೆ ಗಮನಿಸಿದ್ದೇವೆ. ಮಾರ್ಚ್ 5, 2024 ರಂದು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಹಲವಾರು ಸಚಿವರು ಬೆಂಗಳೂರಿನಲ್ಲಿ ಇಡೀ ರಾಜ್ಯದ ಬರ, ನೀರಿನ ಬಿಕ್ಕಟ್ಟಿನ ಬಗ್ಗೆ ಸಭೆ ನಡೆಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪತ್ರಿಕಾಗೋಷ್ಠಿ ನಡೆಸಿದರು, ಅದರ ವೀಡಿಯೋ ಕೂಡ ಡಿ.ಕೆ.ಶಿವಕುಮಾರ್ ಅವರ ಫೇಸ್ಬುಕ್ ಖಾತೆಯಲ್ಲಿ ಲಭ್ಯವಿದೆ.
ಸಭೆಯಲ್ಲಿ ಡಿ.ಕೆ.ಶಿವಕುಮಾರ್ ಚಿಪ್ಸ್ ತಿನ್ನುವ ಈ ವೀಡಿಯೋ ಬೆಂಗಳೂರು ನೀರಿನ ಬಿಕ್ಕಟ್ಟಿನ ಕುರಿತಾದ ಸಭೆಯದ್ದಲ್ಲ ಎಂದು ನಮ್ಮ ತನಿಖೆಯಲ್ಲಿ ದೊರೆತ ಪುರಾವೆಗಳಿಂದ ಸ್ಪಷ್ಟವಾಗಿದೆ
Also Read: ಅಹಮದಾಬಾದ್ನ ರಾಣಿ ಕಾ ಹಜಿರಾದಲ್ಲಿ ದೇಗುಲ ಪತ್ತೆಯಾಗಿದೆಯೇ
Our Sources
Video uploaded by Zee News Kannada, Dated: 12th Dec 2023
YouTube Video by Vijayavani, Dated: 12th Dec 2023
Facebook Post by D.K. Shivkumar on 11th Dec 2023
Telephonic conversation with Janardan, President of Huligi water users association
(ಈ ಲೇಖನವನ್ನು ಮೊದಲು ನ್ಯೂಸ್ ಚೆಕರ್ ಹಿಂದಿಯಲ್ಲಿ ಪ್ರಕಟಿಸಲಾಗಿದ್ದು ಅದು ಇಲ್ಲಿದ)
ಯಾವುದೇ ಕ್ಲೈಮ್ ಅನ್ನು ನಾವು ವಾಸ್ತವಿಕವಾಗಿ ಪರಿಶೀಲಿಸಬೇಕೆಂದು ನೀವು ಬಯಸಿದರೆ, ಪ್ರತಿಕ್ರಿಯೆಯನ್ನು ನೀಡಿ ಅಥವಾ ದೂರು ಸಲ್ಲಿಸಬಹುದು, ಜೊತೆಗೆ 9999499044 ನಲ್ಲಿ ನಮಗೆ WhatsApp ಮಾಡಿ ಅಥವಾ → checkthis@newschecker.in ಮೂಲಕ ನಮಗೆ ಇಮೇಲ್ ಮಾಡಿ. ಸಂಪರ್ಕಿಸಿ ಪುಟದ ಮೂಲಕ ನೀವು ನಮ್ಮನ್ನು ಸಂಪರ್ಕಿಸಬಹುದು ಮತ್ತು ಫಾರಂ ಅನ್ನು ಭರ್ತಿ ಮಾಡಬಹುದು.
Ishwarachandra B G
June 7, 2025
Ishwarachandra B G
June 5, 2025
Ishwarachandra B G
May 20, 2025