Fact Check
ಬೇಲೂರಿನಲ್ಲಿ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಮತಾಂತರ ಮಾಫಿಯಾ ಕೈವಾಡ?
Claim
ಬೇಲೂರಿನಲ್ಲಿ ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣದಲ್ಲಿ ಮತಾಂತರ ಮಾಫಿಯಾ
Fact
ಪ್ರಕರಣದಲ್ಲಿ ಲೀಲಮ್ಮ ಎಂಬಾಕೆಯನ್ನು ಬಂಧಿಸಲಾಗಿದ್ದು, ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾಳೆ ಮತ್ತು ಇದರಲ್ಲಿ ಯಾವುದೇ ಮಾಫಿಯಾ ಕೈವಾಡ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ
ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣ ಹಾಸನದ ಬೇಲೂರಿನಲ್ಲಿ ನಡೆದಿದ್ದು, ಇದರಲ್ಲಿ ಮತಾಂತರ ಮಾಫಿಯಾ ಇದೆ ಎಂಬಂತೆ ಹೇಳಿಕೆಯೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ.
ಎಕ್ಸ್ ನಲ್ಲಿ ಕಂಡುಬಂದ ಪೋಸ್ಟ್ ನಲ್ಲಿ, “ಹಿಂದೂಫೋಬಿಯಾ ಎನ್ನುವುದು ಸತ್ಯ! ಕರ್ನಾಟಕದ ಹಾಸನದಲ್ಲಿ ಗಣೇಶನಿಗೆ ಚಪ್ಪಲಿ ಹಾರ ಹಾಕಿ ಅಪವಿತ್ರಗೊಳಿಸಲಾಗಿದೆ. ಈ ನೀಚ ಕೃತ್ಯದ ಹಿಂದೆ ಮತಾಂತರ ಮಾಫಿಯಾ ಇರುವ ಶಂಕೆ.” ಎಂದಿದೆ.

ಇದರ ಬಗ್ಗೆ ನ್ಯೂಸ್ಚೆಕರ್ ಸತ್ಯಶೋಧನೆ ನಡೆಸಿದ್ದು ಮಾನಸಿಕ ಸ್ಥಿಮಿತವಿಲ್ಲದ ಲೀಲಮ್ಮ ಎಂಬ ಮಹಿಳೆಯೊಬ್ಬರು ಈ ಕೃತ್ಯ ನಡೆಸಿದ ಆರೋಪದಡಿ ಬಂಧನಕ್ಕೊಳಗಾಗಿದ್ದಾಗಿ ಗೊತ್ತಾಗಿದೆ.
Also Read: ಆರ್ ಜೆಡಿ ವಕ್ತಾರೆ ಕಾಂಚನಾ ಯಾದವ್ ಮೇಲೆ ಲಾಠಿ ಚಾರ್ಜ್ ಎಂದು ಮದ್ದೂರು ವೀಡಿಯೋ ವೈರಲ್!
Fact Check/Verification
ಸತ್ಯಶೋಧನೆಗಾಗಿ ನಾವು ಗೂಗಲ್ ನಲ್ಲಿ ಕೀವರ್ಡ್ ಸರ್ಚ್ ನಡೆಸಿದ್ದೇವೆ. ಈ ವೇಳೆ ವಿವಿಧ ವರದಿಗಳು ಕಂಡುಬಂದಿದ್ದು, ಇದರಲ್ಲಿ ಲೀಲಮ್ಮ ಎಂಬಾಕೆಯನ್ನು ಪೊಲೀಸರು ಬಂಧಿಸಿದ್ದಾಗಿ ಹೇಳಲಾಗಿದೆ.
ಸೆಪ್ಟೆಂಬರ್ 21, 2025ರ ಪ್ರಜಾವಾಣಿ ವರದಿಯ ಪ್ರಕಾರ, ಬೇಲೂರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸನದ ವಿಜಯನಗರ ಬಡಾವಣೆಯ ಮಹಿಳೆ ಲೀಲಮ್ಮ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಆಕೆಗೆ ಮಾನಸಿಕ ಸ್ಥಿಮಿತ ಇಲ್ಲ ಎನ್ನುವ ಮಾಹಿತಿ ಇದೆ. ಈ ಬಗ್ಗೆ ಕೂಲಂಕಷ ತನಿಖೆ ನಡೆಸಲಾಗುತ್ತಿದೆ ಎಂದು ಎಸ್ಪಿ ಮೊಹಮ್ಮದ್ ಸುಜೀತಾ ತಿಳಿಸಿದ್ದಾರೆ ಎಂದಿದೆ.

ಸೆಪ್ಟೆಂಬರ್ 22, 2025ರ ಟಿವಿ 9 ಕನ್ನಡ ವರದಿಯ ಪ್ರಕಾರ, ಗಣೇಶ ಮೂರ್ತಿ ಮೇಲೆ ಚಪ್ಪಲಿ ಹಾರ ಹಾಕಿದ ಮಹಿಳೆ ಲೀಲಮ್ಮ ಮಾನಸಿಕ ಅಸ್ವಸ್ಥೆಯಾಗಿದ್ದಾಳೆ ಎಂದು ಆಕೆಯ ತಾಯಿ ಲಕ್ಷ್ಮಮ್ಮ ಹೇಳಿದ್ದಾರೆ. ಆಕೆಗೆ 5-6 ವರ್ಷದಿಂದ ಮಾನಸಿಕ ಸಮಸ್ಯೆ ಇದೆ, ಮನೆಯಲ್ಲಿ ಸರಿಯಾಗಿ ವರ್ತಿಸುತ್ತಿಲ್ಲ, ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸುತ್ತಿದ್ದುದಾಗಿ ಹೇಳಿದ್ದಾಗಿ ಆಕೆ ಹೇಳಿದ್ದಾಗಿ ಇದೆ.
ಇದೇ ರೀತಿಯ ವರದಿಯನ್ನು ಸೆಪ್ಟೆಂಬರ್ 22, 2025ರಂದು ರಿಪಬ್ಲಿಕ್ ಚಾನೆಲ್ ಕೂಡ ವರದಿ ಮಾಡಿದ್ದು, ಗಣೇಶನ ಮೇಲೆ ಚಪ್ಪಲಿ ಹಾರ ಹಾಕಿದ ಆರೋಪದಡಿ ಬಂಧನಕ್ಕೊಳಗಾದ ಲೀಲಮ್ಮ ಮಾನಸಿಕ ಅಸ್ವಸ್ಥೆ ಎಂದಿದೆ.
ತನಿಖೆಯ ಭಾಗವಾಗಿ ನಾವು ಬೇಲೂರು ಪೊಲೀಸನ್ನು ಸಂಪರ್ಕಿಸಿದ್ದೇವೆ. ಈ ವೇಳೆ ಅವರು ಮಾತನಾಡಿ ತನಿಖೆಯ ಭಾಗವಾಗಿ ಆರೋಪಿ ಮಹಿಳೆ ಲೀಲಮ್ಮ ಎಂಬಾಕೆಯನ್ನು ಬಂಧಿಸಲಾಗಿದೆ. ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಬಗ್ಗೆ ವೈದ್ಯಕೀಯ ವರದಿ ಇನ್ನಷ್ಟೇ ಬರಬೇಕಿದೆ. ಪ್ರಕರಣದಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂದು ಹೇಳಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ನಾವು ಆರೋಪಿಯ ತಾಯಿ ಲಕ್ಷ್ಮಮ್ಮ ಅವರನ್ನು ಮಾಧ್ಯಮಕ್ಕಾಗಿ ಮಾತನಾಡಿಸಿದ ಟಿವಿ9 ಕನ್ನಡದ ಹಾಸನ ಪತ್ರಕರ್ತ ಮಂಜುನಾಥ್ ಅವರೊಂದಿಗೆ ಮಾತನಾಡಿದ್ದೇವೆ. ಈ ವೇಳೆ ಅವರು, ಲಕ್ಷ್ಮಮ್ಮ ಅವರು ಮಗಳು ಮಾನಸಿಕ ಸಮಸ್ಯೆಯಿಂದ ಇದ್ದಿರುವ ಬಗ್ಗೆ ಹೇಳಿದ್ದಾರೆ. ಜೊತೆಗೆ ಕಳೆದ 5-6 ವರ್ಷಗಳಿಂದ ವೈದ್ಯಕೀಯ ಚಿಕಿತ್ಸೆ ನೀಡುತ್ತಿದ್ದು, ಆದರೆ ಆಕೆ ವೈದ್ಯರ ನಿರ್ದೇಶನಗಳನ್ನು ಪಾಲಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ. ಲೀಲಮ್ಮ ಅವರು ಮನೆಯಲ್ಲಿ ಎಲ್ಲರಂತಿರಲಿಲ್ಲ. ಆಕೆ ಬಾತ್ ರೂಂ ಮುಂತಾದ ಕಡೆಗಳಲ್ಲಿ ಪೂಜೆಮಾಡುವುದು, ಮನೆಹೊರಗಿನ ಕಸ ಒಳಗೆ ತಂದು ಹಾಕುವುದು ಇತ್ಯಾದಿಗಳನ್ನು ಮಾಡುತ್ತಿದ್ದುದಾಗಿ ಹೇಳಿದ್ದಾಗಿ ತಿಳಿಸಿದ್ದಾರೆ.
Conclusion
ಆದ್ದರಿಂದ ಈ ತನಿಖೆಯ ಪ್ರಕಾರ, ಗಣೇಶ ಮೂರ್ತಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣ ಹಾಸನದ ಬೇಲೂರಿನಲ್ಲಿ ನಡೆದಿದ್ದು, ಇದರಲ್ಲಿ ಮತಾಂತರಿಗಳ ಮಾಫಿಯಾ ಇದೆ ಎಂಬ ಹೇಳಿಕೆ ತಪ್ಪಾಗಿದೆ.
Our Sources
Report by Prajavani, Dated September 21, 2025
YouTube Video by Tv9Kannada, Dated: September 22, 2025
Conversation with PSI, Beluru Police station
Conversation with Manjunath, Tv9 Kannada Hassan